ಮಂಗಳವಾರ, ಫೆಬ್ರವರಿ 4, 2025

ಸಾಧನೆಯ ಹಾದಿ | ಮಕ್ಕಳ ಕಥೆ | ವೆಂಕಟೇಶ ಚಾಗಿ | sadhaneya hadi | makkala kathe | venkatesh chagi | story

   


ಸಾಧನೆಯ ಹಾದಿ




ಕಮಲಾಪುರ ಎಂಬ ಊರಿನಲ್ಲಿ ರಾಮಯ್ಯ ಎಂಬ ರೈತನಿದ್ದನು. ರಾಮಯ್ಯ ತನಗೆ ತನ್ನ ಪೂರ್ವಿಕರಿಂದ ಬಂದ ಜಮೀನಿನಲ್ಲಿ ಉತ್ತಿ ಬಿತ್ತಿ ಬೆಳೆ ಬೆಳೆದು ಸುಖವಾಗಿ ಜೀವನ ಸಾಗಿಸುತ್ತಿದ್ದನು. ಯಾವುದೇ ಆಮೀಷಕ್ಕೆ ಅತೀ ಆಶೆಗೆ ಒಳಗಾಗದೇ ಕಷ್ಟ ಪಟ್ಟು ದುಡಿಯುವುದೇ ಅವನ ನಿತ್ಯ ಕಾಯಕವಾಗಿತ್ತು. ತನ್ನ ದಿನದ ಬಹುತೇಕ ಭಾಗವನ್ನು ಹೊಲ ಗದ್ದೆಗಳಲ್ಲಿ ಕಳೆಯುತ್ತಿದ್ದನು.  ಕೆಲವು ಜನರು ಅವನನ್ನು ಆಸೆಬುರುಕ ಎಂತಲೂ ಲೋಭಿ ಎಂತಲೂ ಮತಿ ಹೀನ ಎಂತಲೂ ಕರೆಯುತ್ತಿದ್ದರು. ಆದರೂ ಯಾರ ಮಾತಿಗು ಗಮನ ಕೊಡದೆ ತನ್ನ ಕಾಯಕವನ್ನು ತಪ್ಪದೆ ಮಾಡುತ್ತಿದ್ದನು.


ರಾಮಯ್ಯನಿಗೆ ಒಬ್ಬ ಮಗನಿದ್ದನು. ಅವನ ಹೆಸರು  ಕಮಲಾಕರ ಎಂದು. ಕಮಲಾಕರ ಅಪ್ಪನ ವಿರುದ್ದ ಗುಣಗಳನ್ನು ಹೊಂದಿದ್ದ. ಹೊಲದಲ್ಲಿ ದುಡಿಯುವುದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ತಾನೊಬ್ಬ ದೊಡ್ಡ ವಿದ್ವಾಂಸನಾಗಿ ಮಾಹಾರಾಜರಿಂದ ಸನ್ಮಾನಿತನಾಗಬೇಕು ಎಂಬ ಬಯಕೆ ಅವನಲ್ಲಿ ಮೂಡಿತ್ತು . ಇದಕ್ಕಾಗಿ ರಾಮಯ್ಯನೊಂದಿಗೆ ವಾಗ್ವಾದ ಮಾಡಿ ಶಾಸ್ತ್ರಾಭ್ಯಾಸಗಳಲ್ಲಿ ತೊಡಗುತ್ತಿದ್ದನು. ಕಾಯಕದ ಅರಿವಿಲ್ಲದ ಕಮಲಾಕರ ಹಣಕ್ಕಾಗಿ ತಂದೆಯನ್ನು ಪೀಡಿಸುತ್ತಿದ್ದನು. ದೊಡ್ಡ ದೊಡ್ಡ ವಿದ್ವಾಂಸರೆದುರು ಸೋತು ಮನೆಗೆ ಬರುತ್ತಿದ್ದನು. ಆದರೂ ತನ್ನ ತಂದೆ ರಾಮಯ್ಯ ನಿಗೆ " ನೋಡುತ್ತಿರು ನಾನು ಒಂದಲ್ಲಾ ಒಂದು ದಿನ ಮಹಾರಾಜರಿಂದ ಸನ್ಮಾನಿತನಾಗುತ್ತೇನೆ. ಅದು ನಿನ್ನಿಂದ ಸಾಧ್ಯವಿಲ್ಲ. ನೀನೋ ಅನಕ್ಷರಸ್ಥ ರೈತ." ಎಂದು ಹೀಯಾಳಿಸುತ್ತಿದ್ದನು. ರಾಮಯ್ಯ,  ಮಗನ ಮಾತುಗಳನ್ನು ಮನಸ್ಸಿಗೆ ತೆಗೆದುಕೊಳ್ಳದೆ ತನ್ನ ಕಾಯಕದಲ್ಲಿ ಮಗ್ನನಾಗಿರುತ್ತಿದ್ದನು.


ಒಂದು ದಿನ ಮಹಾರಾಜರು ಮಾರುವೇಷದಲ್ಲಿ ರಾಜ್ಯದಲ್ಲಿ ಪ್ರವಾಸ ಮಾಡುವಾಗ ರಾಮಯ್ಯನ ಹೊಲಗದ್ದೆಯ  ಬಳಿ ಬಂದರು. ಸಮೃದ್ಧ ಫಸಲನ್ನು ಕಂಡು ಮಹಾರಾಜರು ಸಂತುಷ್ಠರಾದರು. ದೂರದಲ್ಲಿ ಕೆಲಸ ಮಾಡುತ್ತಿದ್ದ ರಾಮಯ್ಯನನ್ನು ಕರೆದು  ರಾಮಯ್ಯನ ಕಾಯಕದ ಬಗ್ಗೆ ವಿಚಾರಿಸಿದರು. ರಾಮಯ್ಯನ ಪರಿಶ್ರಮ ಮಹಾರಾಜರನ್ನು ತುಂಬಾ ಸೆಳೆಯಿತು. ಮಾರುವೇಷದಲ್ಲಿದ್ದ ಮಹಾರಾಜರು ರಾಮಯ್ಯನಿಗೆ, " ರಾಮಯ್ಯ , ನಿನ್ನ ಕರ್ತವ್ಯ , ಶ್ರಮ ಕಂಡು ನನಗೆ ತುಂಬಾ ಸಂತಸವಾಗಿದೆ. ನಾಳೆ ಅರಮನೆಗೆ ಬಾ. ನನ್ನ ಮಕ್ಕಳಿಗೂ ನಿನ್ನ ಶ್ರಮದ ಪರಿಚಯ ಮಾಡಿಕೊಡುವಂತೆ" ಎಂದಾಗ ,ರಾಮಯ್ಯ " ಬುದ್ದಿ ನೀವು ಯಾರು ಅಂತ ಅರಮನೆಯಲ್ಲಿ ಕೇಳಲಿ? " ಎಂದಾಗ , ಮಹಾರಾಜ " ಅರಮನೆಯ ಸೇವಕರಿಗೆ ನಾನೊಬ್ಬ ರೈತ . ರೈತರ ಮಹಾಸೇವಕನ್ನು ನೋಡಬೇಕಿದೆ ಎಂದು ಹೇಳಿದರೆ ಸಾಕು ನನ್ನ ಬಳಿ ಕರೆದು ತರುತ್ತಾರೆ" ಎಂದಾಗ ರಾಮಯ್ಯ ಆಗಲಿ ಎಂದು ಒಪ್ಪಿಕೊಂಡ.


  ಮರುದಿನ ರಾಮಯ್ಯ ತಾನು ಮಹಾರಾಜರ ಅರಮನೆಗೆ ಹೋಗಬೇಕು ಎಂದು ಬಗನ ಬಳಿ ಹೇಳಿದಾಗ , ಮಗ ಕಮಲಾಕರ " ಯಾರೋ ನಿನಗೆ ಸುಳ್ಳು ಹೇಳಿರಬೇಕು. ನೀನೊಬ್ಬ ಬಡ ರೈತ ‌. ಅಲ್ಲಿ ನಿನ್ನಿಂದಾಗುವ ಕೆಲಸವಾದರೂ ಏನಿದೆ?" ಎಂದಾಗ ರಾಮಯ್ಯ ಮಗನ ಮಾತನ್ನು ಲೆಕ್ಕಿಸದೇ ನೇರವಾಗಿ ಅರಮನೆಗೆ ಬಂದಾಗ ಭಟರು ರಾಮಯ್ಯನನ್ನು ವಿಚಾರಿಸಿ ರೈತರ ಮಹಾಸೇವಕನಾದ ಮಹಾರಾಜರ ಬಳಿ ಕರೆದುಕೊಂಡು ಬರುತ್ತಾರೆ. ರಾಮಯ್ಯನಿಗೆ ದಿಘ್ರ್ಬಮೆಯಾಗುತ್ತದೆ. ಮಹಾರಾಜರು , ರಾಮಯ್ಯ ನ ಕೃಷಿ ಸಾಧನೆಯನ್ನು ಸಭಿಕರಿಗೆಲ್ಲಾ ತಿಳಿಸುತ್ತಾರೆ. ರಾಮಯ್ಯ ನನ್ನು ಮಹಾರಾಜರು ಸನ್ಮಾನಿಸುತ್ತಾರೆ.  ಇದನ್ನು ಕಂಡ ಕಮಲಾಕರನ ಅಹಂಕಾರವೆಲ್ಲಾ ಕರಗಿಹೋಗಿ ನಾಚಿಕೆಯಿಂದ ತಲೆತಗ್ಗಿಸುತ್ತಾನೆ.ಸಾಧನೆಗೆ ವಿದ್ವಾಂಸನೇ ಆಗಬೇಕೆಂದಿಲ್ಲ. ಒಬ್ಬ ಸಾಮಾನ್ಯ ರೈತನಲ್ಲೂ ಸಾಧನೆಯ ಗುಣವಿದೆ. " ಎಂದಾಗ  ಅಂದಿನಿಂದ ಕಮಲಾಕರನೂ ತಂದೆಯ ಸಾಧನೆಯ ಹಾದಿಯನ್ನು ಹಿಡಿಯುತ್ತಾನೆ.



=> ವೆಂಕಟೇಶ ಚಾಗಿ
                ‌‌‌‌‌‌              👉ಮುಂದಿನ ಕಥೆ

ಸೋಮವಾರ, ಫೆಬ್ರವರಿ 3, 2025

ಮಕ್ಕಳ ಪಾಠ | ಮಕ್ಕಳ ಕಥೆ | ವೆಂಕಟೇಶ ಚಾಗಿ | makkala kathe | makkala paata | venkatesh chagi

    




ಮಕ್ಕಳ ಪಾಠ



ಅನೇಕ ವರ್ಷಗಳ ಹಿಂದೆ ಅನಂತಪುರ ಎಂಬ ರಾಜ್ಯದಲ್ಲಿ ಸೂರ್ಯಕುಮಾರ ಎಂಬ ರಾಜ ಆಳ್ವಿಕೆ ನಡೆಸುತ್ತಿದ್ದನು. ರಾಜನು ತುಂಬಾ ಬಲಶಾಲಿಯಾಗಿದ್ದ. ತನ್ನ ರಾಜ್ಯದ ಸುತ್ತಮುತ್ತಲಿನ ರಾಜ್ಯಗಳ ಮೇಲೆ ದಂಡೆತ್ತಿ ಹೋಗಿ ರಾಜರನ್ನು ಸೋಲಿಸಿ ಅವರಿಂದ ಅಪಾರ ಕಪ್ಪು ಕಾಣಿಕೆಗಳನ್ನು ಹೊತ್ತು ತರುತ್ತಿದ್ದ. ಇದರಿಂದಾಗಿ ಅವನ ಖಜಾನೆಯು ಧನಕನಕಾಧಿಗಳಿಂದ ತುಂಬಿಹೋಗಿತ್ತು. ರಾಜನಿಗೆ ರಾಜ್ಯದ ಆಡಳಿತ ಹಾಗೂ ಪ್ರಜೆಗಳ ಸುಖ ದುಃಖಗಳ ಕಡೆಗೆ ಗಮನ ಹರಿಸಲು ಸಮಯವೇ ಸಿಗುತ್ತಿರಲಿಲ್ಲ. 


ಒಮ್ಮೆ ರಾಜನ ಮೇಲೆ ದೂರದ ರಾಜ್ಯದ ರಾಜನೊಬ್ಬ ದಂಡೆತ್ತಿ ಬಂದ . ಅವನ ಅಪಾರ ಸೈನ್ಯದ ಎದುರು ಸೂರ್ಯಕುಮಾರನ ಸೈನ್ಯ ಜರ್ಜರಿತವಾಯಿತು . ಸೈನಿಕರ ಮನೋಸ್ಥೈರ್ಯ ಕುಸಿಯಿತು. ಸೈನಿಕರೆಲ್ಲಾ ಜೀವಭಯದಿಂದ ದಿಕ್ಕಾಪಾಲಾಗಿ ಹೋಡಿದರು. ದಂಡೆತ್ತಿ ಬಂದ ರಾಜ ಅರಮನೆಯಲ್ಲಿದ್ದ ಖಜಾನೆಯನ್ನು ಲೂಟಿ ಮಾಡಿ ಖಜಾನೆಯಲ್ಲಿದ್ದ ಧನಕನಕಾಧಿಗಳನ್ನು ನೂರಾರು ಕುದುರೆಗಳ ಮೇಲೆ ಹೇರಿಕೊಂಡು ತನ್ನ ರಾಜ್ಯದತ್ತ ಮುಖಮಾಡಿದ. ಸೂರ್ಯಕುಮಾರ ಎಲ್ಲವನ್ನೂ ಕಳೆದುಕೊಂಡು ದಂಡೆತ್ತಿ ಬಂದ ರಾಜನಿಂದ ಪಾರಾಗಿ ಮಾರುವೇಷದಿಂದ ದೂರದ ಒಂದು ಗ್ರಾಮದತ್ತ ತೆರಳಿ ಆ ಗ್ರಾಮದ ಊರ ಹೊರಗಿನ ಒಂದು ಆಲದ ಮರವನ್ನು ಏರಿ ಕುಳಿತುಕೊಂಡ. 



ಸ್ವಲ್ಪ ಸಮಯದ ನಂತರ ಆನದ ಮರದ ಕೆಳಗೆ ಆ ಗ್ರಾಮದ ಕೆಲವು ಮಕ್ಕಳು ಬಂದು ಆಟವಾಡತೊಡಗಿದರು. ಮಕ್ಕಳ ಆಟ ತುಂಟಾಟಗಳನ್ನು ಕಂಡು ರಾಜನಿಗೆ ಖಷಿಯಾಯಿತು. ಮಕ್ಕಳೆಲ್ಲಾ ಸೇರಿ ಯುದ್ದದ ಆಟವನ್ನು ಆಡುವ ಯೋಚನೆ ಮಾಡಿದರು. ಮಕ್ಕಳು ತಮ್ಮಲ್ಲಿಯೇ ಎರಡು ಗುಂಪುಗಳನ್ನು ಮಾಡಿ ತಲಾ ಒಂದೊಂದು ಗುಂಪಿಗೆ ಒಬ್ಬ ರಾಜನ ನೇಮಕ ಮಾಡಿದರು. ಒಂದನೇ ಗುಂಪಿನ ನಾಯಕ ದಷ್ಟಪುಷ್ಟನಾಗಿದ್ದ.  ತನ್ನ ಗುಂಪಿನ ಸದಸ್ಯರಿಗೆ ತಾನು ರಾಜನೆಂದೂ ತನಗೆ ಬಹುಪರಾಕ್ ಹೇಳಬೇಕೆಂದು ಆದೇಶಿಸುತ್ತಿದ್ದ. ಎರಡನೇ ಗುಂಪಿನ ನಾಯಕ ಅಷ್ಟೇನು ದಷ್ಟಪುಷ್ಟನಾಗಿ ಇಲ್ಲದಿದ್ದರೂ ತುಂಬಾ ಚಾಣಾಕ್ಷತನಾಗಿದ್ದ. ತನ್ನ ಗುಂಪಿನ ಸದಸ್ಯರೊಂದಿಗೆ ತುಂಬಾ ಆತ್ಮೀಯತೆಯಿಂದ ಆಪ್ತವಾಗಿ ನಡೆದುಕೊಳ್ಳುತ್ತಿದ್ದ. ಇದರಿಂದಾಗಿ ಆ ಗುಂಪಿನ ಸದಸ್ಯರು ಸ್ವಯಂ ಪ್ರೇರಣೆಯಿಂದ ನಾಯಕನಿಗೆ ಜೈ ಜೈ ಎನ್ನುತ್ತಿದ್ದರು.



ಮಕ್ಕಳ ಯುದ್ದವು ಪ್ರಾರಂಭವಾಯಿತು. ಎರಡನೇ ಗುಂಪಿನ ಮಕ್ಕಳು ತಮ್ಮ ನಾಯಕನ ಪ್ರೇರಣೆಯೊಂದಿಗೆ ಒಗ್ಗಟ್ಟಿನಿಂದ ಹೋರಾಡತೊಡಗಿದರು. ಮೊದಲನೇ ಗುಂಪಿನ ನಾಯಕ ತನ್ನ ಗುಂಪಿನ ಸದಸ್ಯರನ್ನು ಹೋರಾಡಲು ಬಿಟ್ಟು ಹಿಂದೆ ಸರಿದು ಯುದ್ದ ಮಾಡಲು ಆದೇಶಿಸುತ್ತಿದ್ದ. ಮೊದಲನೇ ಗುಂಪಿನ ಮಕ್ಕಳು ತಮ್ಮ ನಾಯಕನ ಮೇಲೆ ಒಬ್ಬೊಬ್ಬರಾಗಿ ಬೇಸರಗೊಂಡು ಗುಂಪು ಬಿಟ್ಟು ಹೊರಬರತೊಡಗಿದರು. ನಾಯಕ ಮಾತ್ರ ತನ್ನ ಕಠಿಣ ಮಾತುಗಳಿಂದ ಬೇಜವಾಬ್ದಾರಿಯಿಂದ ಹೋರಾಟ ಮಾಡಲು ಹೇಳುತ್ತಿದ್ದ. ಇದರ ಪರಿಣಾಮವಾಗಿ ಮೊದಲ ಗುಂಪಿನ ನಾಯಕನ ಬಳಿ ಯಾವ ಮಕ್ಕಳೂ ಇಲ್ಲದಾಗಿ ಸೋಲು ಒಪ್ಪಿಕೊಳ್ಳಬೇಕಾಯಿತು. ಎರಡನೇ ಗುಂಪಿನ ಮಕ್ಕಳು ತಾವು ಗೆದ್ದದ್ದಕ್ಕೆ ಸಂಭ್ರಮಿಸಿದರು. ನಾಯಕನನ್ನು ತಮ್ಮ ಹೆಗಲಮೇಲಿರಿಸಿಕೊಂಡು ಮೆರವಣಿಗೆ ಮಾಡಿದರು.



ಮಕ್ಕಳ ಆಟ ಮುಗಿಯಿತು. ಮರದ ಮೇಲೆ ಕುಳಿದಿದ್ದ ರಾಜನಿಗೆ ಮಕ್ಕಳ ಆಟ ಕಂಡು ತುಂಬಾ ಸಂತೋಷವಾಯಿತು. ಮರದಿಂದ ಕೆಳಗೆ ಇಳಿದು ಬಂದು ಗೆದ್ದ ನಾಯಕನಿಗೆ ಅಭಿನಂದಿಸಿ ತನ್ನ ಕೊರಳಲ್ಲಿ ಇದ್ದ ಸರವನ್ನು ಉಡುಗೊರೆಯಾಗಿ ನೀಡಿದ. ನಂತರ ಮಕ್ಕಳನ್ನು ಉದ್ದೇಶಿಸಿ, " ಮಕ್ಕಳೇ, ನೀವು ನನಗೆ ಒಳ್ಳೆಯ ಪಾಠ ಹೇಳಿಕೊಟ್ಟಿರಿ. ನಿಮ್ಮ ಪಾಠ ನನ್ನ ಮುಂದಿನ ದಿನಗಳಿಗೆ ದಾರಿದೀಪವಾಗಲಿದೆ. ನಿಮ್ಮ ನಾಯಕನ ಗುಣಗಳನ್ನು ನಾನೂ ಅಳವಡಿಸಿಕೊಳ್ಳುತ್ತೇನೆ" ಎಂದು ಹೇಳಿ ತನ್ನ ಅರಮನೆಯತ್ತ ತೆರಳಿದ. ಮುಂದಿನ ದಿನಗಳಲ್ಲಿ ಪ್ರಜೆಗಳಿಗೆ , ಸೈನಿಕರಿಗೆ ಉತ್ತಮ ನಾಯಕನಾಗಿ ರಾಜ್ಯಭಾರ ಮಾಡಿ ಹೆಸರುವಾಸಿಯಾದ.




ಇನ್ನಷ್ಟು ಓದಿ



(Comment on WhatsApp 9611311195)